ಕ್ವೀನ್ ೨೦೧೪ರ ವಿಕಾಸ್ ಬೆಹೆಲ್ ನಿರ್ದೇಶನದ ಒಂದು ಹಿಂದಿ ಹಾಸ್ಯಪ್ರಧಾನ ನಾಟಕ ಚಿತ್ರ. ಈ ಚಲನಚಿತ್ರವನ್ನು ಅನುರಾಗ್ ಕಶ್ಯಪ್, ವಿಕ್ರಮಾದಿತ್ಯ ಮೋಟ್ವಾನೆ ಹಾಗೂ ಮಧು ಮಂಟೇನಾ ನಿರ್ಮಾಣ ಮಾಡಿದ್ದಾರೆ. ಚಲನಚಿತ್ರದಲ್ಲಿ ಕಂಗನಾ ರಣೌತ್ ಮುಖ್ಯ ಪಾತ್ರದಲ್ಲಿ ನಟಿಸಿದರೆ, ಲೀಸಾ ಹೇಡನ್ ಹಾಗೂ ರಾಜ್‍ಕುಮಾರ್ ರಾವ್ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಆತ್ಮವಿಶ್ವಾಸ ಕಡಿಮೆಯಿರುವ ನವದೆಹಲಿಯ ಒಬ್ಬ ಪಂಜಾಬಿ ಹುಡುಗಿ ರಾನಿ, ಅವಳನ್ನು ಮದುವೆಯಾಗಲಿರುವವನು ಅವರ ಮದುವೆಯನ್ನು ಮುರಿದಾಗ, ಒಬ್ಬಳೇ ತನ್ನ ಮಧುಚಂದ್ರಕ್ಕಾಗಿ ಪ್ಯಾರಿಸ್ ಹಾಗೂ ಆ್ಯಮ್‍ಸ್ಟರ್‌ಡ್ಯಾಮ್‍ಗೆ ಹೋಗುತ್ತಾಳೆ. ಬೆಹೆಲ್ ಕ್ವೀನ್‍ನ ಕಥೆಯನ್ನು ಚೈತಾಲಿ ಪರ್ಮಾರ್ ಹಾಗೂ ಪರ್ವೀಜ಼್ ಶೇಖ್‍ರೂಂದಿಗೆ ಬರೆದರು. ಚಿತ್ರದ ಸಂಭಾಷಣೆಗಳನ್ನು ಅನ್ವಿತಾ ದತ್ ಗುಪ್ತನ್ ಬರೆದರು. ಚಿತ್ರೀಕರಣದ ವೇಳೆಯಲ್ಲಿ ರಣೌತ್‍ರಿಗೆ ತಮ್ಮ ಸಾಲುಗಳನ್ನು ಪೂರ್ವಸಿದ್ಧತೆಯಿಲ್ಲದೆಯೇ ಸಿದ್ಧಪಡಿಸಿ ಹೇಳಲು ಪ್ರೋತ್ಸಾಹಿಸಿದ ಬೆಹೆಲ್, ರಣೌತ್‍ರನ್ನು ಹೆಚ್ಚುವರಿ ಸಂಭಾಷಣಾ ಬರಹಗಾರ್ತಿ ಎಂದು ಉಲ್ಲೇಖಿಸಲಾಗಿದೆ. ಅಮಿತ್ ತ್ರಿವೇದಿ ಸಂಗೀತ ನೀಡಿದ್ದರೆ ಗುಪ್ತನ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ₹12.5 ಕೋಟಿ ಬಂಡವಾಳದಲ್ಲಿ ನಿರ್ಮಾಣವಾದ ಈ ಚಿತ್ರ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ ₹108 ಕೋಟಿಗಿಂತಲೂ ಹೆಚ್ಚು ಹಣವನ್ನು ಗಳಿಸಿ, ವಾಣಿಜ್ಯಿಕ ಯಶಸ್ಸಾಗಿ ಹೊರಹೊಮ್ಮಿತು. ಕ್ವೀನ್ ಹಲವಾರು ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ೬೦ನೇ ಫ಼ಿಲ್ಮ್‌ಫ಼ೇರ್ ಪ್ರಶಸ್ತಿ ಸಮಾರಂಭದಲ್ಲಿ, ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಿರ್ದೇಶಕ ಹಾಗೂ ರಣೌತ್‍ರಿಗೆ ಅತ್ಯುತ್ತಮ ನಟಿ ಸೇರಿದಂತೆ ಈ ಚಿತ್ರವು ಆರು ಪ್ರಮುಖ ಪ್ರಶಸ್ತಿಗಳನ್ನು ಗೆದ್ದಿತು. ೬೨ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ, ಈ ಚಿತ್ರವು ಅತ್ಯುತ್ತಮ ಹಿಂದಿ ಚಲನಚಿತ್ರ ಮತ್ತು ಅತ್ಯುತ್ತಮ ನಟಿ ಪ್ರಶಸ್ತಿಗಳನ್ನು ಗೆದ್ದುಕೊಂಡಿತು. == ಕಥಾವಸ್ತು == ರಾನಿ ಮೆಹ್ರಾ ದೆಹಲಿಯ ಒಬ್ಬ ನಾಚಿಕೆ ಸ್ವಭಾವದ, ಸೌಮ್ಯ ಹಾಗೂ ಯುವ ಪಂಜಾಬಿ ಮಹಿಳೆಯಾಗಿರುತ್ತಾಳೆ. ತನ್ನ ಮದುವೆಯ ಒಂದು ದಿನ ಮುನ್ನ, ಅವಳನ್ನು ಮದುವೆಯಾಗುವ ಹುಡುಗ ವಿಜಯ್ (ರಾಜ್‍ಕುಮಾರ್ ರಾವ್) ತಾನು ಅವಳನ್ನು ಮದುವೆಯಾಗಲು ಬಯಸುವುದಿಲ್ಲ ಎಂದು ಅವಳಿಗೆ ಹೇಳುತ್ತಾನೆ. ವಿದೇಶದಲ್ಲಿ ಇದ್ದ ನಂತರ ತನ್ನ ಜೀವನಶೈಲಿ ಬದಲಾಗಿದೆ, ಮತ್ತು ಆಕೆಯ ಸಂಪ್ರದಾಯವಾದಿ ಅಭ್ಯಾಸಗಳು ಅವನಿಗೆ ಹೊಂದಾಣಿಕೆಯಾಗುವುದಿಲ್ಲ ಎಂದು ಅವನು ವಿವರಣೆ ಕೊಡುತ್ತಾನೆ. ಈ ಬೆಳವಣಿಗೆಯಿಂದ ದಿಗ್ಭ್ರಮೆಗೊಂಡು, ರಾನಿ ತನ್ನನ್ನು ತನ್ನ ಕೋಣೆಯಲ್ಲಿ ಒಂದು ದಿನದವರೆಗೆ ಕೂಡಿ ಹಾಕಿಕೊಳ್ಳುತ್ತಾಳೆ. ಪರಿಸ್ಥಿತಿಯ ಮೇಲೆ ಹಿಡಿತ ಸಾಧಿಸಲು ಬಯಸಿ, ಅವಳು ಒಬ್ಬಂಟಿಯಾಗಿ ಪ್ಯಾರಿಸ್ ಹಾಗೂ ಆ್ಯಮ್‍ಸ್ಟರ್ಡ್ಯಾಮ್‍ಗೆ ಮೊದಲೇ ಕಾಯ್ದಿರಿಸಿದ ತನ್ನ ಮಧುಚಂದ್ರಕ್ಕೆ ಹೋಗಲು ತನ್ನ ಹೆತ್ತವರ ಅನುಮತಿಯನ್ನು ಕೇಳುತ್ತಾಳೆ. ಆರಂಭದಲ್ಲಿ ಹಿಂಜರಿದರೂ, ರಜೆಗಳು ಅವಳನ್ನು ಗೆಲುವಾಗಿಸಬಹುದು ಎಂದು ಯೋಚಿಸಿ ನಂತರ ಅವಳ ತಂದೆತಾಯಿಗಳು ಒಪ್ಪುತ್ತಾರೆ. ಪ್ಯಾರಿಸ್‍ನಲ್ಲಿ, ರಾನಿಯು ತಾನು ಉಳಿದುಕೊಂಡಿರುವ ಹೊಟೆಲ್‍ನಲ್ಲಿ ಕೆಲಸ ಮಾಡುವ ಫ್ರೆಂಚ್-ಸ್ಪ್ಯಾನಿಶ್-ಭಾರತೀಯ ಮೂಲದ, ಪ್ರಗತಿಪರ ಮನೋಭಾವದ ಮಹಿಳೆಯಾದ ವಿಜಯಲಕ್ಷ್ಮಿಯನ್ನು (ಲೀಸಾ ಹೇಡನ್) ಭೇಟಿಯಾಗುತ್ತಾಳೆ. ಹೊಸ ನಗರದಿಂದ ಪೂರ್ತಿಯಾಗಿ ಸೋತು ಮತ್ತು ಎರಡು ಸಲ ಕಷ್ಟಕ್ಕೆ ಸಿಲುಕಿ – ಒಮ್ಮೆ ಸ್ಥಳೀಯ ಪೊಲೀಸರೊಂದಿಗೆ ಮತ್ತು ಒಮ್ಮೆ ಒಬ್ಬ ಕಳ್ಳನೊಂದಿಗೆ – ರಾನಿ ಭಾರತಕ್ಕೆ ಮರಳಲು ಉದ್ದೇಶಿಸುತ್ತಾಳೆ. ಆದರೆ, ವಿಜಯಲಕ್ಷ್ಮಿಯು ಅವಳಿಗೆ ಸಹಾಯಮಾಡಿ ನಗರದ ಸುತ್ತಲಿನ ಒಂದು ಪ್ರವಾಸವನ್ನು ಮಾಡಿಸುತ್ತಾಳೆ. ಇಬ್ಬರೂ ಅನೇಕ ಸಾಹಸಗಳನ್ನು ಎದುರಿಸುತ್ತಾರೆ, ಮತ್ತು ಆ ಸಂದರ್ಭದಲ್ಲಿ ರಾನಿಯು ವಿಜಯ್ ತನ್ನನ್ನು ಪ್ರೋತ್ಸಾಹಿಸಿದ ಮತ್ತು ಕುಣಿಯುವುದು ಹಾಗೂ ಕುಡಿಯುವುದನ್ನು ನಿಷೇಧಿಸಿದ್ದ ನೆನಪುಗಳನ್ನು ಮೆಲುಕು ಹಾಕುತ್ತಾಳೆ – ಅವಳು ಪ್ಯಾರಿಸ್‍ನಲ್ಲಿ ಅವುಗಳನ್ನು ಮುಕ್ತವಾಗಿ ಮಾಡಬಹುದಾಗಿರುತ್ತದೆ. ಒಂದು ನಿರ್ದಿಷ್ಟ ಘಟನೆಯ ಸಂದರ್ಭದಲ್ಲಿ, ಹೆಚ್ಚು ಮೈ ತೋರಿಸುವ ಉಡುಪುಗಳೆಂದು ತಾನು ಪರಿಗಣಿಸಿದ್ದನ್ನು ಧರಿಸಿ ನೋಡಿ, ಆ ಉಡುಪನ್ನು ಧರಿಸಿರುವ ಸೆಲ್ಫಿಯನ್ನು ಆಕಸ್ಮಿಕವಾಗಿ ವಿಜಯಲಕ್ಷ್ಮಿಯ ಬದಲಾಗಿ ವಿಜಯ್‍ಗೆ ಕಳುಹಿಸುತ್ತಾಳೆ. ಅವಳು ಬೇಗನೇ ತನ್ನ ತಪ್ಪನ್ನು ಅರಿತುಕೊಳ್ಳುತ್ತಾಳೆ, ಆದರೆ ಅವಳಿಗೆ ಗೊತ್ತಾಗದಂತೆ, ಆ ಸೆಲ್ಫಿಯು ವಿಜಯ್‍ಗೆ ರಾಣಿಯಲ್ಲಿ ಆಸಕ್ತಿಯನ್ನು ಪುನರುಜ್ಜೀವನಗೊಳಿಸುತ್ತದೆ ಮತ್ತು ಅವನು ಅವಳನ್ನು ಹುಡುಕಲು ನಿರ್ಧರಿಸುತ್ತಾನೆ. ಅಂತಿಮವಾಗಿ, ವಿಜಯಲಕ್ಷ್ಮಿಗೆ ಭಾವನಾತ್ಮಕ ವಿದಾಯ ಹೇಳಿ ಆ್ಯಮ್‍ಸ್ಟರ್ಡ್ಯಾಮ್‍‍ನ ಟ್ರೇನ್ ಹತ್ತುವ ಸಮಯ ಬರುತ್ತದೆ. ಆದರೆ, ಆ್ಯಮ್‍ಸ್ಟರ್ಡ್ಯಾಮ್‍‌ಗೆ ಆಗಮಿಸಿದಾಗ, ಅವಳಿಗೆ ತಲ್ಲಣವಾಗುವಂತೆ, ತನ್ನ ಹಾಸ್ಟೆಲ್ ಕೋಣೆಯನ್ನು ಮೂರು ಪುರುಷರೊಂದಿಗೆ ಹಂಚಿಕೊಳ್ಳಬೇಕೆಂದು ಕಂಡುಕೊಳ್ಳುತ್ತಾಳೆ: ಜಪಾನ್‍ನ ಟಾಕಾ, ಫ಼್ರಾನ್ಸ್‌ನ ಟಿಮ್ ಮತ್ತು ರಷ್ಯಾದ ಒಲೆಕ್ಸ್ಯಾಂಡರ್. ಆಕೆ ಸಂದೇಹಪಟ್ಟರೂ ಸಹ, ಬೇಗನೇ ಅವರ ಒಳ್ಳೆ ಸ್ನೇಹಿತೆಯಾಗುತ್ತಾಳೆ, ಮತ್ತು ಶಾಪಿಂಗ್ ಮಾಡಿ, ಪ್ರೇಕ್ಷಣ ಮಾಡಿ, ಸೆಕ್ಸ್ ಶಾಪ್‍ಗೆ ಭೇಟಿ ಕೊಟ್ಟು, ಚರ್ಚ್‌ಗೆ ಹೋಗಿ ಮತ್ತು ಒಂದು ಕ್ಲಬ್‍ನಲ್ಲಿ ಪೋಲ್ ಡಾನ್ಸರ್‌ಗಳನ್ನು ಭೇಟಿಮಾಡಿ ಕಾಲ ಕಳೆಯುತ್ತಾಳೆ. ಕ್ಲಬ್‍ನಲ್ಲಿ, ರಾನಿಯು ಒಬ್ಬ ಪೋಲ್ ಡಾನ್ಸರ್‌ಳಾಗಿರುವ ಮತ್ತು ಲಾಹೋರ್‌ನಲ್ಲಿರುವ ತನ್ನ ಕುಟುಂಬದ ಏಕೈಕ ನಿರ್ವಾಹಕಿಯಾದ ಒಬ್ಬ ಪಾಕಿಸ್ತಾನಿ ಹುಡುಗಿ ಮತ್ತು ವಿಜಯಲಕ್ಷ್ಮಿಯ ಗೆಳತಿಯಾದ ರಾಕ್ಸೆಟ್/ರುಖ್ಸಾರ್‌ಳ (ಸಬೀಕಾ ಇಮಾಮ್) ಸ್ನೇಹ ಬೆಳೆಸುತ್ತಾಳೆ. ತನ್ನ ನಿರ್ಧಾರಗಳ ಮೇಲೆ ಹತೋಟಿ ಪಡೆಯುವ ಮೂಲಕ ರಾನಿಯು ನಿಧಾನವಾಗಿ ಆತ್ಮವಿಶ್ವಾಸವನ್ನು ಗಳಿಸಲು ಪ್ರಾರಂಭಿಸುತ್ತಾಳೆ. ಪಾನಿ ಪೂರಿಗಳನ್ನು ಮಾರಿ ಅಡಿಗೆ ಸ್ಪರ್ಧೆಯನ್ನು ಗೆಲ್ಲುವ ಮೂಲಕ, ಮತ್ತು ಅಡಿಗೆ ಸ್ಪರ್ಧೆಯ ಇಟಾಲಿಯನ್ ಆತಿಥೇಯನೊಂದಿಗೆ ತನ್ನ ಮೊದಲ ಚುಂಬನವನ್ನು ಅನುಭವಿಸುವ ಮೂಲಕ ಅವಳಿಗೆ ತನ್ನ ಸಂಪಾದನಾ ಸಾಮರ್ಥ್ಯದ ಅರಿವೂ ಆಗುತ್ತದೆ. ತನ್ನ ಸ್ನೇಹಿತರ ಹಿನ್ನೆಲೆಗಳ ಬಗ್ಗೆ ಹೆಚ್ಚು ತಿಳಿದುಕೊಂಡು ವಿಶ್ವದ ಇತರ ಭಾಗಗಳಲ್ಲಿ ಜನರಿಗೆ ಜೀವನವು ಎಷ್ಟು ಭಿನ್ನವಾಗಿರಬಹುದು ಎಂದು ಅರ್ಥಮಾಡಿಕೊಳ್ಳಲು ಪ್ರಾರಂಭಿಸುತ್ತಾಳೆ. ಒಂದು ದಿನ, ಆ ನಾಲ್ಕು ಸ್ನೇಹಿತರು ಹಾಸ್ಟೆಲ್‍ನ ಎದುರಿಗೆ ರಾನಿಗಾಗಿ ವಿಜಯ್ ಕಾಯುತ್ತಿರುವುದನ್ನು ಕಾಣುತ್ತಾರೆ. ವಿಜಯ್ ರಾನಿಯ ಕ್ಷಮೆಯಾಚಿಸಿ ತಮ್ಮ ಸಂಬಂಧವನ್ನು ಮತ್ತೆ ಪರಿಶೀಲಿಸುವಂತೆ ಅವಳನ್ನು ಕೇಳಿಕೊಳ್ಳುತ್ತಾನೆ. ಅವನು ರಾನಿಯನ್ನು ಬಿಗಿಹಿಡಿದು ಸೆಳೆಯಲು ಪ್ರಯತ್ನಿಸಿದಾಗ ಅವರ ಸಂಭಾಷಣೆಯು ಉಲ್ಬಣಗೊಳ್ಳುತ್ತದೆ. ಆದರೆ ಅವಳ ಸ್ನೇಹಿತರು ಪ್ರತಿದಾಳಿ ಮಾಡುತ್ತಾರೆ, ಮತ್ತು ಅವನು ಅಲ್ಲಿಂದ ಹೋಗುವಂತೆ ರಾನಿಯು ಕೇಳಿಕೊಳ್ಳುತ್ತಾಳೆ. ವಿಜಯ್‍ನನ್ನು ಬೇಟಿಯಾಗಿ ಭವಿಷ್ಯವನ್ನು ಚರ್ಚಿಸಲು, ರಾನಿಯು ತನ್ನ ಸ್ನೇಹಿತರೊಂದಿಗೆ ಗಾನಗೋಷ್ಠಿಗೆ ಹೋಗುವುದನ್ನು ತಪ್ಪಿಸಿಕೊಳ್ಳುವುದಕ್ಕೆ ನಿರ್ಧರಿಸುತ್ತಾಳೆ. ವಿಜಯ್‍ನು ರಾನಿಯ ಹೊಸ ಸ್ನೇಹಿತರು ಮತ್ತು ವರ್ತನೆಯ ಗುಣಪರೀಕ್ಷೆ ಮಾಡಿದ್ದರಿಂದ ಅವಳು ದೆಹಲಿಗೆ ಹಿಂದಿರುಗಿದ ನಂತರ ಅವನೊಂದಿಗೆ ಮಾತನಾಡುವುದು ಒಳ್ಳೆಯದು ಎಂದು ಹೇಳಿ ಹಠಾತ್ತಾಗಿ ಹೊರಟುಹೋಗುತ್ತಾಳೆ. ನಂತರ ಅವಳು ಗಾನಗೋಷ್ಠಿಯಲ್ಲಿ ತನ್ನ ಸ್ನೇಹಿತರನ್ನು ಕೊನೆಯ ಸಲ ಒಮ್ಮೆ ಭೇಟಿಯಾಗುತ್ತಾಳೆ. ಅವರಿಗೆ ಭಾವನಾತ್ಮಕ ವಿದಾಯ ಹೇಳಿ, ರಾನಿ ಭಾರತಕ್ಕೆ ಮರಳುತ್ತಾಳೆ. ದೆಹಲಿಗೆ ಹಿಂದಿರುಗಿ, ರಾನಿ ವಿಜಯ್‍ನನ್ನು ಅವನ ಮನೆಯಲ್ಲಿ ಭೇಟಿಯಾಗುತ್ತಾಳೆ. ಅವಳು ಅವನನ್ನು ಕ್ಷಮಿಸಲು ತೀರ್ಮಾನಿಸಿದ್ದಾಳೆ ಎಂದು ವಿಜಯ್ ಮತ್ತು ಅವನ ಕುಟುಂಬದವರು ಭಾವಿಸಿ ಮದುವೆಯ ಯೋಜನೆಗಳನ್ನು ಚರ್ಚಿಸಲು ಪ್ರಾರಂಭಿಸುತ್ತಾರೆ. ಬದಲಾಗಿ, ರಾನಿಯು ಅವನಿಗೆ ನಿಶ್ಚಿತಾರ್ಥದ ಉಂಗುರವನ್ನು ಕೊಟ್ಟು "ಧನ್ಯವಾದಗಳು" ಎಂದು ಹೇಳಿದ ನಂತರ ತನ್ನ ಮುಖದ ಮೇಲೆ ವಿಶ್ವಾದ ನಗೆಯೊಂದಿಗೆ ಹೊರಟುಹೋಗುತ್ತಾಳೆ. == ಉಲ್ಲೇಖಗಳು ==